ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 29 , 2014
|
ಜನವರಿ 29, 2014
|
ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಪ್ರಶಸ್ತಿ ಪ್ರದಾನ
ಉಡುಪಿ :
ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 56ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಂಬಲಪಾಡಿ ದೇವಳದ ವಠಾರದಲ್ಲಿ ನಡೆಯಿತು.
ಅಂಬಲಪಾಡಿ ದೇವಾಲಯದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ಕಲಾವಿದ ಎಂ.ಎ.ನಾಯ್ಕ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕಲಾವಿದ ಗೋವಿಂದ ಉರಾಳ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಈರಪ್ಪ ಭಾಗವತರಿಗೆ ನೀಡಿ ಗೌರವಿಸಿದರು. ಈ ಪ್ರಶಸ್ತಿಗಳು 5000 ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿವೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರ್ಡೇಶ್ವರದ 'ಯಕ್ಷರಕ್ಷ ' ಸಂಸ್ಥೆಯ ಅಧ್ಯಕ್ಷ ಡಾ.ಐ. ಆರ್ ಭಟ್ ಮಾತನಾಡಿ, ಯಕ್ಷಗಾನ ಒಂದು ಸಮಷ್ಟಿ ಕಲೆ. ಇಂತಹ ಅಪೂರ್ವ ಕಲೆಯನ್ನು ಅರ್ಧ ಶತಮಾನಗಳ ಕಾಲ ಅತ್ಯಂತ ಅಚ್ಚುಕಟ್ಟಾಗಿ ಬೆಳೆಸಿಕೊಂಡು ಬಂದ ಅಂಬಲಪಾಡಿ ಯಕ್ಷಗಾನ ಮಂಡಳಿಯು ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಹಿರಿಯ ಕಲಾಸಾಧಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಬಾಲಯಕ್ಷಗಾನ ಮಂಡಳಿಯ ಮಕ್ಕಳ ವೇಷಭೂಷಣ, ಪರಿಕರಗಳಿಗೆ 35 ಸಾವಿರ ರೂ. ಮೊತ್ತವನ್ನು ಕುಕ್ಕಿಕಟ್ಟೆಯ ಶ್ರೀಕಲಾ ಕೇಟರರ್ಸ್ ಮಾಲಕ ಸುರೇಶ್ ಅವರು ತಮ್ಮ ತಂದೆ ತಾಯಿ ರಾಧಾಕಷ್ಣ ರಾವ್ ಮತ್ತು ಶೋಭ ಅವರ ಮೂಲಕ ಮಂಡಳಿಗೆ ಹಸ್ತಾಂತರಿಸಿದರು.
ಹೋಟೆಲ್ ಕಿದಿಯೂರು ಮಾಲಕ ಭುವನೇಂದ್ರ ಕಿದಿಯೂರು ಸಂಸ್ಥೆಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ನಟರಾಜ್ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ತೆಂಕಿಲ್ಲಾಯ ವಂದಿಸಿದರು. ಪ್ರಶಸ್ತಿ ಪ್ರದಾನದ ಮೊದಲು ಬಾಲಕಲಾವಿದರಿಂದ 'ಹೂವಿನ ಕೋಲು' ಹಾಗೂ ಸಭೆಯ ಬಳಿಕ ಮಂಡಳಿಯ ಸದಸ್ಯರಿಂದ 'ರಾಜರ್ಷಿ ಕೌಶಿಕ 'ಯಕ್ಷಗಾನ ಪ್ರದರ್ಶನ ನಡೆಯಿತು.
ಕೃಪೆ :
http://www.vijaykarnataka.com
|
|
|